ಸೋಮವಾರ, ಆಗಸ್ಟ್ 5, 2019

ಸ್ನೇಹಲೋಕ 10ನೇ ವಾರ್ಷಿಕೋತ್ಸವ

ಸ್ನೇಹ ಅದು ಅಮರ, ಸ್ನೇಹ ಅದು ಚಿರನೂತನ, ಅಮೃತವಾಹಿನಿಯೊಂದು ಹರಿಯುತ್ತಿದೆ ಮಾನವನ ಎದೆಯಿಂದ ಎದೆಗೆ ಸತತ..!!
ಆತ್ಮೀಯ ಗೆಳೆತನಕ್ಕೊಂದು ಪ್ರೀತಿಯ ನಮನ ಎಂದೂ ನೋಡಿರದ ವ್ಯಕ್ತಿಗಳೊಂದಿಗೆ ಸಹಜತೆಯಲ್ಲಿ ಮೂಡುವುದೇ ಸ್ನೇಹ. ಆತ್ಮೀಯವಾದ ನುಡಿಗಳೊಂದಿಗೇ ಎಂದೂ ಕಂಡರಿಯದ ಪ್ರೀತಿ, ವಿಶ್ವಾಸ, ಭಾಂದವ್ಯ, ಬೆಸುಗೆ ಇವೆಲ್ಲವೂಗಳನ್ನೂ ನೀಡುವುದು ಈ ಸ್ನೇಹ ಒಂದೇ...!!!
ಸ್ನೇಹಲೋಕ ಹೆಸರೇ ಹೇಳುವಂತೆ ಇದೊಂದು ಸ್ನೇಹಿತರ ಬಳಗ. 




ಹತ್ತು ವರ್ಷಗಳ ಹಿಂದೆ ಆರ್ಕುಟ್ ಇಂದ ಆರಂಭವಾಗಿ ಇಂದು ಫೇಸಬುಕ್, ವಾಟ್ಸಪ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಏಳು ಜನರಿಂದ ಆರಂಭವಾದ ಈ ಬಳಗ ಇಂದೂ ನೂರಾರು ಜನರ  ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಈ ಸಮಾಜದಲ್ಲಿ ತನ್ನದೇ ಆದ ಹೆಸರನ್ನು ಉಳಿಸಿಕೊಂಡಿದೆ. ಹಾಗೇ ಸ್ನೇಹಲೋಕ ಬಳಗ ಸ್ಥಾಪನೆ ಆದ ದಿನವನ್ನು ಆಶ್ರಮಗಳು & ಸರಕಾರಿ ಶಾಲೆಗಳ ಅವಶ್ಯಕ ಬೇಡಿಕೆಗಳನ್ನು ಈಡೇರಿಸುತ್ತ ತನ್ನ ವಾರ್ಷಿಕೊತ್ಸವವನ್ನು ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರ ಮೂಲಕ ಇಂದಿನ ತನಕ ಅಚರಣೆ ಮಾಡುತ್ತ ಬಂದಿದೆ. ಇಂದೂ ಈ ಸ್ನೇಹಲೋಕ ಆರಂಭವಾಗಿ ಹತ್ತು ವರ್ಷಗಳು. ಈ ದಶಕದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಣೆ ಮಾಡಬೇಕು ಎಂಬ ಕನಸನ್ನು ಹೊತ್ತು ಸತತ ಮೂರು ತಿಂಗಳ ಅವಿರತ ಪರಿಶ್ರಮದಿಂದ ಬೆಂಗಳೂರಿನ ವಿವಿಧ ಏರಿಯಾದ ಒಟ್ಟು ಹತ್ತು ಆಶ್ರಮಗಳ ಮಕ್ಕಳಿಗೆ ನೃತ್ಯ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಇಂದೂ ಅದರ ಯಶಸ್ಸಿನ ಖುಷಿಯಲ್ಲಿ ನಮ್ಮ ಎಲ್ಲಾ ಸ್ನೇಹಿತರು ಇದ್ದಾರೆ.
ಆಶ್ರಮದ ಮಕ್ಕಳ ಪ್ರತಿಭೆಗಳನ್ನು ಹೊರತರುವ ಒಂದು ವಿಭಿನ್ನ ಪ್ರಯತ್ನವೇ ಈ ಲಿಟ್ಲ್ ಚಾಂಪ್ಸ್ - 2019. 




ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಒಟ್ಟು ಹತ್ತು ಆಶ್ರಮಗಳಿಂದ ಬರೋಬ್ಬರಿ 189 ಮಕ್ಕಳು ಭಾಗವಹಿಸಿದ್ದರು. ಒಂದೇ ವೇದಿಕೆಯ ಮೇಲೆ ಇವರೆಲ್ಲರೂ ತಮ್ಮಲ್ಲಿರುವ ಕಲೆಯನ್ನು ವೇದಿಕೆಯ ಮೇಲೆ ತೋರಿಸಿ ನೆರೆದ ಜನರ ಪಾಲಿಗೆ ಒಂದು ಒಳ್ಳೆಯ ಮನೋರಂಜನೆಯನ್ನು ಕೊಟ್ಟು ಸ್ನೇಹಲೋಕದ ವಾರ್ಷಿಕೋತ್ಸವ ದ ದಿನವನ್ನು ಸ್ಮರಣೀಯವಾಗಿ ಮಾಡಿರುವುದು ಖುಷಿಯ ವಿಚಾರ.  ಹತ್ತು ನೃತ್ಯಗಳು ವಿವಿಧ ಬಗೆಯ ಕಲೆ, ಸಂಸ್ಕೃತಿಯ ಅನಾವರಣ ಆಗಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ಭಾಷಣವನ್ನು ಶ್ರೀಮತಿ ಅನುಪಮಾ ಗೌಡ ಅವರು ಮಾಡಿದರು. ಕಾರ್ಯಕ್ರಮದ ವಾಡಿಕೆಯಂತೆ ಪ್ರಾರ್ಥನೆಯನ್ನು ನಮ್ಮ ಸ್ನೇಹಲೋಕ ಬಳಗದ ಮಹಿಳಾ ಸದಸ್ಯರುಗಳು ನೆರವೇರಿಸಿಕೊಟ್ಟರು. ನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ನೇಹಲೋಕ ಬಳಗಕ್ಕೆ ಸದಾ ಬೆಂಬಲ ನೀಡುತ್ತ ಬಂದಿರುವ ಮತ್ಸ್ಯ ವಿಜ್ಞಾನಿ, ಕವಿಯು ಕೂಡ  ಆಗಿರುವ ಶ್ರೀ ಆಜಾದ್ ಐ ಎಸ್, ನಮ್ಮೆಲ್ಲರ ಅಚ್ಚುಮೆಚ್ಚಿನ ಅಕ್ಕ 3ಕೆ ಬಳಗದ ಮೂಲಕ ಕನ್ನಡ ಸಾಹಿತ್ಯದ ಬೆಳವಣಿಗೆಗೆ ನೆರವಾಗುವ ಮೂಲಕ ಒಂದು ಪುಟ್ಟ ಹೆಜ್ಜೆಯನ್ನು ಇಟ್ಟು ಅದರಲ್ಲಿ ಯಶಸ್ಸು ಕೂಡ ಸಾಧಿಸಿರುವ ಶ್ರೀಮತಿ ರೂಪಾ ಸತೀಶ್ , ಖ್ಯಾತ ಗಾಯಕಿ ಆಗಿರುವ ಶ್ರೀಮತಿ ಅಂಜಲಿ ಹಳಿಯಾಳ್ , ನಮ್ಮ ಸ್ನೇಹಲೋಕ ಬಳಗದ ಅಧ್ಯಕ್ಷರೆಂದೆ ಹೆಸರುವಾಸಿಯಾದ ಸುಮನಾ ಕತ್ತಿ, ನಮ್ಮ ಬಳಗದ ಸದಸ್ಯರು ಆಗಿರುವ ಶ್ರೀ ರಮೇಶ್ ಅವರು  ನಡೆಸಿಕೊಟ್ಟರು. ಬಳಗದ ಸದಸ್ಯರಾದ ಶ್ರೀ ವಸಂತ್ ಅವರು ಸ್ನೇಹಲೋಕ ನಡೆದು ಬಂದ ದಾರಿಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ನಂತರ ಸ್ನೇಹಲೋಕದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಶ್ರೀ ರಮೇಶ್ ಅವರು ಹಂಚಿಕೊಂಡರು. ತದನಂತರ ಅತಿಥಿಗಳಾಗಿ ಆಗಮಿಸಿದವರು ತಮ್ಮ ಭಾಷಣದ ಮೂಲಕ ಸ್ನೇಹಲೋಕ ವಾರ್ಷಿಕೋತ್ಸವದ ಈ ಕಾರ್ಯಕ್ರಮಕ್ಕೆ ಶುಭ ಕೋರಿದರು. ಆಧ್ಯಕ್ಷೀಯ ಭಾಷಣವನ್ನು ಸುಮನಾ ಕತ್ತಿ ಅವರು ಮಾಡಿದರು. 



ಹತ್ತನೇ ವರ್ಷದ ಸಂಭ್ರಮದ ನೆನಪಿಗಾಗಿ "ಶ್ರಮಜೀವಿ ಪುರಸ್ಕಾರ" ಅನ್ನು ಸ್ವಾವಲಂಬಿ ಟ್ರಸ್ಟ್ ನ ಅಂಧ ಗಾಯಕರಾದ ಗೋಪಿ ಅವರಿಗೆ ನೀಡುವುದರ ಮೂಲಕ ಸನ್ಮಾನಿಸಲಾಯಿತು. ಯಾರಿಗೂ ಭಾರವಾಗದೇ ಸ್ವಾವಲಂಬಿ ಜೀವನ ನಡೆಸುತ್ತಿರುವ ಈ ಅಂಧ ಗಾಯಕರು ತಮ್ಮ ಹಾಡಿನ ಮೂಲಕ ನೆರೆದ ನಮ್ಮೆಲ್ಲರನ್ನು ರಂಜಿಸಿದರು. ವೇದಿಕೆ ಕಾರ್ಯಕ್ರಮ ಮುಗಿದ ಮೇಲೆ
ಆಶ್ರಮದ ಮಕ್ಕಳಿಗೆ ನೃತ್ಯ ಸ್ಪರ್ಧೆ ಆರಂಭ ಮಾಡಲು ಸಿದ್ಧತೆ ಮಾಡಿಕೊಳ್ಳೋ ಹೊತ್ತಿಗೆ ವೇದಿಕೆಯಲ್ಲಿ ಎಲ್ಲರಿಗೂ ಅಚ್ಚರಿ ನೀಡಿದ ಬಳಗದ ಸದಸ್ಯರಾದ ಸಂದೀಪ್ ( ಪಿಪಿ ) , ಕಿರಣ್, ಭುವನ್ ಅವರು ತಮ್ಮ ತಂಡದ ಮೂಲಕ ನೃತ್ಯ ಮಾಡುವುದರ ಮೂಲಕ ನಮ್ಮೆಲ್ಲ ಸ್ನೇಹಿತರಿಗೆ ಭರಪೂರ ಮನರಂಜನೆಯನ್ನೇ ಕೊಟ್ಟರು. 



ಇದಾದ ನಂತರ ಆರಂಭ ಆಗಿದ್ದೆ ಆಶ್ರಮದ ಮಕ್ಕಳಿಗೆ ನೃತ್ಯ ಸ್ಪರ್ಧೆ. ಒಂದೊಂದು ವಿಭಿನ್ನ, ವಿಶಿಷ್ಟವಾದ ಕಲೆ, ಸಂಸ್ಕೃತಿಯ ಅನಾವರಣ ...!!!
ಕಿಕ್ಕಿರಿದು ನೆರೆದ ಮಂದಿಗೆ ತಮ್ಮ ಪ್ರತಿಭೆಯ ಮೂಲಕ ರಂಜಿಸಿದ 189 ಮಕ್ಕಳು ನಿಜಕ್ಕೂ ವೇದಿಕೆಗೆ ಸಂಪೂರ್ಣವಾದ ನ್ಯಾಯ ಒದಗಿಸಿದರು. ನಮ್ಮ ಮೂರು ತಿಂಗಳ ಪರಿಶ್ರಮಕ್ಕೆ ಅರ್ಧ ದಿನದಲ್ಲಿಯೇ ಅದರ ಪ್ರತಿಫಲ ಸಿಕ್ಕೇ ಬಿಟ್ಟಿತು. ನಮ್ಮೆಲ್ಲ ಸದಸ್ಯರ ಮೊಗದಲ್ಲಿ ಕಿರು ಸಂತಸವನ್ನೇ ತರಿಸಿತು. ಎಲ್ಲಾ ನೃತ್ಯ ಸ್ಪರ್ಧೆ ಮುಗಿದ ನಂತರ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪದಕಗಳನ್ನು ಕೊಡುವುದರ ಮೂಲಕ ಅವರ ಪ್ರತಿಭೆಯನ್ನು ಈ ಮೂಲಕ ಗೌರವಿಸಲಾಯಿತು. ಇದೆಲ್ಲಾ ಆಗೋ ಹೊತ್ತಿಗೆ ಎಲ್ಲರ ಮನದಲ್ಲಿ ಮೂಡಿದ ಪ್ರಶ್ನೆ ಒಂದೇ ಯಾರು ವಿಜೇತರು ಎಂಬುದು..‌ ಅದನ್ನು ಅತಿಥಿಗಳು ಹಾಗೂ ನಿರ್ಣಾಯಕರಾಗಿ ಬಂದ ಶ್ರೀಮತಿ ರೂಪಾ ಸತೀಶ್, ಶ್ರೀ ಅಜಾದ್ ಐ ಎಸ್, ಶ್ರೀಮತಿ ಅಂಜಲಿ ಹಳಿಯಾಳ್ ಘೋಷಣೆ ಮಾಡಿದರು. ನೃತ್ಯ ಸ್ಪರ್ಧೆಯ ವಿಜೇತರಾಗಿದ್ದು ಶಿಶುಮಂದಿರ ಆಶ್ರಮದವರು. ದ್ವಿತೀಯ ಸ್ಥಾನವನ್ನು ಸಹಸ್ರ ದೀಪಿಕ ಆಶ್ರಮದವರು ಹಾಗೂ ತೃತೀಯ ಸ್ಥಾನವನ್ನು ಸ್ನೇಹಜ್ಯೋತಿ ಆಶ್ರಮದವರು ಪಡೆದುಕೊಂಡರು. ಕಾರ್ಯಕ್ರಮ ನೋಡಲು ಬಂದ ಓರ್ವರು ಸ್ವಲ್ಪದರಲ್ಲಿಯೇ ಮೂರನೇ ಸ್ಥಾನದಿಂದ ವಂಚಿತರಾದ ಕಲ್ಪವೃಕ್ಷ ಆಶ್ರಮದವರಿಗೆ ತಾವು ಪುಟ್ಟ ಬಹುಮಾನವನ್ನು ನೀಡುವುದರ ಮೂಲಕ ಗೌರವಿಸಿದರು. ಅವರಿಗೂ ಕೂಡ ಸ್ನೇಹಲೋಕ ಬಳಗದ ಪರವಾಗಿ ಧನ್ಯವಾದಗಳು. ಅಂತಿಮವಾಗಿ ವಂದನಾರ್ಪಣೆ ನಡೆಸಿಕೊಟ್ಟಿದ್ದು ರತಿ ಪ್ರಜೀತ್ ಅವರು.
ಇದೆಲ್ಲಾ ಆಗೋ ಹೊತ್ತಿಗೆ ಸಮಯ ಎರಡು ಮೂವತ್ತು ಆಗಿತ್ತು .. ಎಲ್ಲರಿಗೂ ಹೊಟ್ಟೆ ತಾಳ ಹಾಕುತಿತ್ತು. ಮೊದಲಿಗೆ ಎಲ್ಲಾ ಆಶ್ರಮದ ಮಕ್ಕಳಿಗೆ ಊಟವನ್ನು ನೀಡಿ ನಂತರ ನಮ್ಮ ಬಳಗದ ಸದಸ್ಯರು ಊಟ ಮಾಡಿದರು.
ಊಟದ ವಿರಾಮ ಮುಗಿದ ನಂತರ ಆರಂಭ ಆಗಿದ್ದು ನಮ್ಮ ಸ್ನೇಹಲೋಕ ಸದಸ್ಯರಿಂದ ಕಾರ್ಯಕ್ರಮ. ನಮ್ಮ ಬಳಗದ ಖ್ಯಾತ ಗಾಯಕರಾದ ಅಶ್ವಥ್ ಬಿಡದಿ , ರಮೇಶ್ ರಮ್ಮಿ ಹಾಗೂ ಸ್ಟಾರ ಮೇಕರ್ ಸಿಂಗರ್ಸ್ ಇಂದ ಗಾಯನ ಕಾರ್ಯಕ್ರಮ ನಡೆಯಿತು. ಎರಡನೇ ಹಂತದ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಹೊತ್ತವರು ಶ್ರೀಮತಿ ರೇಣುಕಾ ಭುವನ್ ಹಾಗೂ ಶ್ರೀ ರವಿ ಸಕಲೇಶಪುರ ಇವರು.



ಕರ್ನಾಟಕದ ಹಾಗೂ ನಮ್ಮ ನೆರೆ ಹೊರೆ ರಾಜ್ಯದ ವಿಭಿನ್ನ ಸಂಸ್ಕೃತಿಯನ್ನು ವೇಷಭೂಷಣದ ಮೂಲಕ ವೇದಿಕೆಯನ್ನು ಆವರಿಸಿಕೊಂಡಿದ್ದು ನಮ್ಮ ಸ್ನೇಹಲೋಕ ಜ್ಯೂನಿಯರ್ಸ್.. ತಮ್ಮ ಪುಟ್ಟ ಪುಟ್ಟ ಹೆಜ್ಜೆಯ ಮೂಲಕ ನೆರೆದ ಜನರನ್ನು ರಂಜಿಸಿದರು. ನಂತರ  ರಾಜಸ್ತಾನಿ ನೃತ್ಯದ ಮೂಲಕ ನಮ್ಮೆಲ್ಲರನ್ನು ರಂಜಿಸಿದ ಶ್ರೀಮತಿ ಸ್ವಾತಿ ಮಹೇಶ್ ಹಾಗೂ ಅವರ ಮಗಳು .
ಭರತನಾಟ್ಯ, ಹಾಗೂ ಇನ್ನೀತರ ಕಾರ್ಯಕ್ರಮ ಮುಗಿಯೋ ಹೊತ್ತಿಗೆ ಸಂಜೆ 5 ಆಗಿತ್ತು. ಕಾರ್ಯಕ್ರಮ ಮುಗಿಯೋ ಸಮಯ ಕೂಡ ಆಗಿತ್ತು. ನಂತರ ಎಲ್ಲಾ ಸದಸ್ಯರು ವಾರ್ಷಿಕೋತ್ಸವದ ಸವಿನೆನಪಿಗಾಗಿ ಗ್ರೂಪ್ ಪೋಟೋ ತೆಗೆಸಿಕೊಂಡು ಕೂಡ ಆಯ್ತು.
ಎಲ್ಲರ ಮೊಗದಲ್ಲಿ ಒಂದು ಯಶಸ್ವಿ ವಾರ್ಷಿಕೋತ್ಸವವನ್ನು ಆಚರಣೆ ಮಾಡಿದ ತೃಪ್ತಿ. ಒಬ್ಬೊಬ್ಬರಾಗಿಯೇ ಕಾರ್ಯಕ್ರಮದ ಸ್ಥಳದಿಂದ ತಮ್ಮ ತಮ್ಮ ಮನೆಗೆ ಹೊರಟಿದ್ದು ಕೂಡ ಆಯ್ತು.
ಒಂದು ಕಾರ್ಯಕ್ರಮ ನಡೆಸುವುದರ ಹಿಂದೆ ಎಷ್ಟೊಂದು‌ ಪರಿಶ್ರಮ, ಕೆಲಸ ಕಾರ್ಯಗಳು ಇವೆಲ್ಲವೂಗಳನ್ನು ಒಂದೇ ಕ್ಷಣದಲ್ಲಿ ನೀಗಿಸುವುದು ಆ ಕಾರ್ಯಕ್ರಮ ಸಂಪೂರ್ಣವಾಗಿ ಯಶಸ್ಸು ಕಾಣುವುದರ ಮೂಲಕ. ಅದು ಈಡೇರಿದೆ. ಮತ್ತೇ ಇಂತಹದೇ ಕಾರ್ಯಕ್ರಮದ ಮೂಲಕ ಮುಂದೇ ಯಾವತ್ತಾದರೂ ಸಿಗೋಣ. ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಇದೇ ರೀತಿಯ ಸಹಾಯ, ಸಹಕಾರ ಯಾವತ್ತೂ ಹೀಗೆ ಇರಲಿ. ಈ ನಮ್ಮ ಸ್ನೇಹಲೋಕ ನಿತ್ಯನೂತನವಾಗಿರಲಿ.
ಜೈ ಸ್ನೇಹಲೋಕ..


18 ಕಾಮೆಂಟ್‌ಗಳು:

  1. ತುಂಬಾ ಚೆನ್ನಾಗಿ ಬರೆದಿದ್ದೀರ ಪ್ರವೀಣ್ 👏

    ಪ್ರತ್ಯುತ್ತರಅಳಿಸಿ